“ಪ್ರತಿಯೊಬ್ಬರೂ ಎಲ್ಲರಿಗಾಗಿ! ಎಲ್ಲರೂ ಪ್ರತಿಯೊಬ್ಬರಿಗಾಗಿ!” ಮಕ್ಕಳೆ, ಈ ಭಾವದಲ್ಲಿ ನಾವು ಜೀವನ ಸಾಗಿಸಬೇಕು.
೨೧ನೇ ಶತಮಾನದ ಕಾಲುಭಾಗ ಮುಗಿಯುವ ಈ ಹೊತ್ತು ನಮ್ಮ ಲೋಕದ ಅವಸ್ಥೆ ಏನಾಗಿದೆ? ಕೆಲವೆಡೆ ಜನರ ನಡುವಿನ ಕಲಹಗಳಿಂದ ಜನ ಕಷ್ಟಪಡುತ್ತಿದ್ದಾರೆ. ಇನ್ನು ಕೆಲವೆಡೆ ಅಧಿಕಾರಕ್ಕಾಗಿ ಸಂಘರ್ಷಗಳು ನಡೆದಿವೆ. ಮತ್ತೆ ಕೆಲವೆಡೆ, ಯುದ್ಧದ ಭೀತಿಯಿಂದ, ವಿನಾಶದಿಂದ ಜನ ನಲುಗುತ್ತಿದ್ದಾರೆ. ಕೆಲವೆಡೆ ಆತಂಕವಾದಿಗಳ ಹಿಡಿತದಲ್ಲಿ ಜನ ಸಿಲುಕಿದ್ದಾರೆ. ಆ ಸ್ಥಳಗಳಲ್ಲಿ ಹೆಣ್ಣುಮಕ್ಕಳು, ಸಣ್ಣಮಕ್ಕಳು ಹಾಗೂ ಮಹಿಳೆಯರು ಅಪಾರ ಕಷ್ಟಗಳಿಗೆ ಸಿಕ್ಕಿರುತ್ತಾರೆ. ಕೆಲವು ದೇಶಗಳಲ್ಲಿ ಊಟ ಸಿಗದೆ, ಹಸಿವಿನಿಂದ ಕಂಗಾಲಾದ ಕೂಸುಗಳು ತಮ್ಮ ಕೈಯನ್ನೇ ಕಡಿದುಕೊಳ್ಳುತ್ತಿವೆ. ಹೀಗೆ, ರೋಗ, ಹಸಿವು, ಅಸಹಾಯಕತೆ- ನಿಲ್ಲದ ಕಣ್ಣೀರು, ಮುಗಿಯದ ವೇದನೆ. ಇದೇ ಇಂದಿನ ಲೋಕದ ಭೀಕರವಾದ ಅವಸ್ಥೆ.
ಲೋಕದ ವಿವಿಧ ಭಾಗಗಳಲ್ಲಿ ಸುಮಾರು ೨೦೦ ಕೋಟಿ ಜನರಾದರೂ ಇಂಥ ವಿವಿಧ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ, “ಪ್ರತೀಕ್ಷೆಗಳೆಲ್ಲಾ ನಿರಾಶೆಯಲ್ಲಿ ಮುಗಿಯುತ್ತಿವೆಯೇ!” ಎಂದು ಭಯವಾಗುತ್ತದೆ. ಇವತ್ತಿಗೂ ಸಹ ಮನುಷ್ಯರು ಪರಸ್ಪರರನ್ನು ಅರ್ಥಮಾಡಿಕೊಳ್ಳಲಾಗದೆ ಕಲಹಕ್ಕಿಳಿಯುತ್ತಾರೆ. ಹೀಗಿರುವಾಗ `ಪರಿಸ್ಥಿತಿಯಲ್ಲಿ ಬದಲಾವಣೆ ತರಲು ನಾವೇನು ಮಾಡಬಹುದು?’ ಎಂದು ಚಿಂತಿಸಬೇಕು. ಸಾಧ್ಯವಾದುದನ್ನು ಮಾಡಲೇಬೇಕು. ಅದು ಚಿಕ್ಕದೇ ಆದರೂ ಸಹ. ಒಬ್ಬರ ಕಣ್ಣೀರನ್ನು ಒರೆಸಲು ಸಾಧ್ಯವಿದ್ದರೆ, ನಾವು ಹಾಗೆ ಮಾಡಲೇ ಬೇಕು.
ನಾವು ಒಳ್ಳೆಯ ಚಿಂತೆಗಳನ್ನು ಬೆಳೆಸಿಕೊಳ್ಳಬೇಕು. ಒಂದು ಪ್ರಯತ್ನದಲ್ಲಿ ತೊಡಗುತ್ತೇವೆ; ಆಗ ನಮ್ಮ ಉಪಬೋಧ ಮನಸ್ಸಿನಲ್ಲಿ ಸೋಲು ಗೆಲವುಗಳ ಬಗ್ಗೆ ಸಂಕಲ್ಪಗಳು ಏಳುತ್ತವೆ. ಆ ಸಂಕಲ್ಪಗಳು ನಮ್ಮ ಯಶಸ್ಸಿಗೆ ಬಹುಪಾಲು ಕೊಡುಗೆ ನೀಡುತ್ತವೆ. ಉಪಬೋಧ ಮನಸ್ಸಿನಲ್ಲಿ ಶುಭಪ್ರತೀಕ್ಷೆಗಳಿದ್ದರೆ ವಿಜಯದ ಸಾಧ್ಯತೆ ಹೆಚ್ಚಿಗಿರುತ್ತದೆ. ಉಪಬೋಧ ಮನಸ್ಸಿನಲ್ಲಿ ಶುಭಪ್ರತೀಕ್ಷೆಯನ್ನು ಹೆಚ್ಚಿಸಿಕೊಳ್ಳಲು ಮಾರ್ಗ ಯಾವುದು? ಒಂದೇ ಮಾರ್ಗ: ಬೋಧಮನಸ್ಸಿನಲ್ಲಿ ಸುಪ್ರತೀಕ್ಷೆಗಳನ್ನು, ಸಕಾರಾತ್ಮಕ ಚಿಂತೆಗಳನ್ನು ಹೆಚ್ಚಿಸಿಕೊಳ್ಳಬೇಕು. ಆಗ, ಕ್ರಮೇಣ ಉಪಬೋಧ ಮನಸ್ಸಿನಲ್ಲೂ ಒಳ್ಳೆಯ ಚಿಂತೆಗಳು ತುಂಬುವುವು. ಆಗ ನಮ್ಮ ವಿಜಯದ ಸಾಧ್ಯತೆಗಳು ಹಲವುಪಟ್ಟು ಹೆಚ್ಚುತ್ತವೆ. ಆದ್ದರಿಂದ ಬೋಧಮನಸ್ಸಿನಲ್ಲಿ ನಾವು ಸದಾ ಕಾಲ ಒಳ್ಳೆಯ ಚಿಂತೆಗಳನ್ನು ಬೆಳೆಸಿಕೊಳ್ಳಬೇಕು. ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ಕಾಡ್ಗಿಚ್ಚು ಹತ್ತಿತು. ಎಕರೆಗಟ್ಟಲೆ ಕಾಡು ಬೂದಿಯಾಯಿತು. ಆದರೆ ಆ ಬೂದಿಯಿಂದಲೇ ಸಣ್ಣ ಪುಟ್ಟ ಗಿಡಗಳು ಮೇಲೆದ್ದು, ಹೂವು ಬಿರಿಯತೊಡಗಿದವು. ಅವು ಬಹುವಿಶೇಷವಾದ ಗಿಡಗಳು. ಶಾಖ ಹೊಗೆ ಇವಿರುವ ಕಡೆ ಮಾತ್ರ ಈ ಬೀಜ ಮೊಳೆತು ಗಿಡವಾಗುವುದು!
ಹೀಗೆ, ಅಡಚಣೆಗಳಿಗೆ ನಮ್ಮ ಆಂತರಿಕ ಶಕ್ತಿಯನ್ನು ಜಾಗೃತಮಾಡುವ ಸಾಮರ್ಥ್ಯವಿದೆ. ನಿಜವಾದ ಶಕ್ತಿವಂತರು ಯಾರೆಂದು ಅವು ತೋರಿಸುತ್ತವೆ. ಅಡಚಣೆ ಎದುರಾದಾಗ ದುರ್ಬಲರು ಬೀಳುವರು. ಧೈರ್ಯವಂತರಾದರೋ ಅಡಚಣೆಯನ್ನೇ ಯಶಸ್ಸಿಗೆ ಮೆಟ್ಟಿಲಾಗಿಸಿಕೊಳ್ಳುವರು. ಕಷ್ಟಗಳಿಂದ ನಾವು ಪಾಠ ಕಲಿಯಬಹುದು. ಉದಾಹರಣೆಗೆ -ಅಗತ್ಯವಿರುವುದನ್ನು ತೆಗೆದುಕೊಳ್ಳುವುದು, ಆಸೆಗಳ ಬೆನ್ನುಹತ್ತದಿರುವುದು -ಇದನ್ನು ಕಲಿಯುತ್ತೇವೆ. ಆಧ್ಯಾತ್ಮ ಪಾಲಿಸುವವರು ಹಾಗೇ ಮಾಡುವರು. ಎಲ್ಲದಕ್ಕೂ ಧನ್ಯವಾದ ಹೇಳುತ್ತಾ ಮುಂದೆಮುಂದೆ ಸಾಗುವರು. ತೆಗೆದುಕೊಳ್ಳುವಾಗ ‘ಧನ್ಯವಾದ!’ ಹೇಳುವರು. ಕೊಡುವಾಗಲೂ ‘ಧನ್ಯವಾದ!’ ಹೇಳುವರು. ಇದು ಹೀಗೇ ಒಂದು ಧನಾತ್ಮಕ ಶೃಂಖಲೆಯಾಗಿ ಮುಂದುವರಿಯುತ್ತದೆ.

