ವಿಶ್ವಾಮಿತ್ರ ಮತ್ತು ವಸಿಷ್ಠ ಮಹರ್ಷಿಗಳು

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಪ್ರಾಚೀನ ಕಾಲದ ಋಷಿಗಳದು ಅತ್ಯಂತ ಪ್ರಮುಖ ಪಾತ್ರ. ಅದರಲ್ಲೂ ವಿಶ್ವಾಮಿತ್ರ, ವಸಿಷ್ಠರಂತೂ ಶಾಸ್ತç ಪುರಾಣ ಇತಿಹಾಸಗಳೆಲ್ಲದರಲ್ಲಿ ಬಹುಮುಖ್ಯ ಭೂಮಿಕೆಯನ್ನು ನಿಭಾಯಿಸುವ ಮಹರ್ಷಿಗಳು.  

ವಿಶ್ವಾಮಿತ್ರ ಮತ್ತು ವಸಿಷ್ಠರ ನಡುವಿನ ವಿರಸ ಹಾಗೂ ವಿಷಮ ಘಟನೆಗಳು ಅನೇಕವಿದ್ದು, ಅವು ತತ್ತ್ವಗಳನ್ನು ಕಲಿಸುವಂಥವಾಗಿವೆ. ವಿರಸ ಮುಗಿದು ವಿಶ್ವಾಮಿತ್ರರು ಬ್ರಹ್ಮರ್ಷಿಯಾದ ಕಥೆ ಹೀಗಿದೆ.

ಮಹಾನ್ ತಪಸ್ವಿಯಾದ ವಿಶ್ವಾಮಿತ್ರರ ಸಾಮರ್ಥ್ಯ ಅಪಾರವಾಗಿತ್ತು. ತಮ್ಮ ತಪೋಬಲದಿಂದ ಅವರು ಸತ್ಯವ್ರತನೆಂಬ ರಾಜನಿಗಾಗಿ ಪ್ರತ್ಯೇಕ ತ್ರಿಶಂಖು ಸ್ವರ್ಗವನ್ನೇ ನಿರ್ಮಿಸಿಕೊಟ್ಟಿದ್ದರು. ಆದರೆ ಅವರಿಗೆ ಸಮಾಧಾನವಿರಲಿಲ್ಲ.

`ತಾನು ಕೇವಲ ರಾಜರ್ಷಿ, ಆದರೆ ವಸಿಷ್ಠರು ಬ್ರಹ್ಮರ್ಷಿ ಎನಿಸಿದ್ದಾರೆ,’ ಎಂದಾಗಿತ್ತು ವಿಶ್ವಾಮಿತ್ರರ ಕೊರಗು. ವಿಶ್ವಾಮಿತ್ರರಿಗೆ ಎಷ್ಟೇ ಸಾಮರ್ಥ್ಯವಿದ್ದರೂ ಬ್ರಹ್ಮಪದವಿಗೆ ಏರಲು ಅವರ ಅಂತರAಗದಲ್ಲಿ ಒಂದು ಮಹಾನ್ ಪರಿವರ್ತನೆ ಆಗಬೇಕಿತ್ತು. ಆದರೆ ಅವರ ಮನಸ್ಸಿನಲ್ಲಿ ವರ್ಧಿಸುತ್ತಿದ್ದುದು ಹಗೆತನವೊಂದೇ. ವಸಿಷ್ಠರ ಕಾಮಧೇನು ತನಗೆ ಬೇಕೆಂದು ಅವರ ಮೇಲೆ ಆಕ್ರಮಣ ಮಾಡಿಯೂ, ವಸಿಷ್ಠರ ನೂರಾರು ಶಿಷ್ಯರ ಸಂಹಾರವನ್ನು ಮಾಡಿಯೂ ವಿಶ್ವಾಮಿತ್ರರ ಮನಸ್ಸಿಗೆ ಶಾಂತಿ ಸಿಕ್ಕಿರಲಿಲ್ಲ.

ಒಂದು ದಿನ ಸಂಜೆ ಕತ್ತಲಿಳಿದ ಮೇಲೆ, ವಸಿಷ್ಠರನ್ನು ಕೊಂದುಬಿಡುವ ಹುನ್ನಾರದಲ್ಲಿ ವಿಶ್ವಾಮಿತ್ರರು ಆಯುಧ ಹೊತ್ತು ಅವರ ಕುಟೀರಕ್ಕೆ ಬರುತ್ತಾರೆ.

ಅಂದು ಹುಣ್ಣಿಮೆ. ಕುಟೀರದ ಅಂಗಳದ ಹೂದೋಟದಲ್ಲಿ ವಸಿಷ್ಠರು ತಮ್ಮ ಋಷೀಕ ಪತ್ನಿ ಅರುಂಧತಿಯ ಜೊತೆ ಪ್ರಕೃತಿಯ ಮನೋಹರತೆಯನ್ನು ಆಸ್ವಾದಿಸುತ್ತಾ ಕುಳಿತಿದ್ದರು. ಒಂದು ಹಂತದಲ್ಲಿ ಮೌನವಾಗಿದ್ದ ವಸಿಷ್ಠರನ್ನು ಮಡದಿಯು, “ಏನು ಯೋಚಿಸುತ್ತಿದ್ದೀರಾ?” ಎಂದು ಕೇಳಿದರು.

“ನಾನು ನನ್ನ ಪ್ರಿಯಮಿತ್ರ ವಿಶ್ವಾಮಿತ್ರನನ್ನು ನೆನೆಯುತ್ತಿದ್ದೇನೆ. ‘ಇಷ್ಟು ಸುಂದರವಾದ ಸಮಯದಲ್ಲಿ ಅವನೂ ಇಲ್ಲಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು,’ ಎನ್ನಿಸುತ್ತಿದೆ.”

ಅರುಂಧತಿ ಕೇಳಿದರು, “ವಿಶ್ವಾಮಿತ್ರರು ತಮ್ಮನ್ನು ಅತ್ಯಧಿಕ ದ್ವೇಷ ಮಾಡುವರು. ಎಲ್ಲರೂ ತಮ್ಮನ್ನು ‘ಬ್ರಹ್ಮರ್ಷಿ’ ಎಂದು ಕರೆಯಲಿ ಎಂದು ಅವರು ಬಯಸುವರು. ಅವರ ಮೇಲೆ ಇಷ್ಟು ಪ್ರೀತಿ ಇರುವುದಾದರೆ, ತಾವು ಹಾಗೆಂದು ಅವರನ್ನು ಕರೆದು, ಅವರ ಮನಸ್ಸಿಗೆ ಸಮಾಧಾನ ನೀಡಬಹುದಲ್ಲ…”

ವಸಿಷ್ಠರು ವಿವರಿಸುತ್ತಾರೆ, “ಹೌದು, ಮಡದಿ, ಹಾಗೆ ಮಾಡಬಹುದಿತ್ತು. ಆದರೆ ನನಗೆ ವಿಶ್ವಾಮಿತ್ರರ ಮೇಲೆ ನಿಜವಾದ ಪ್ರೇಮವಿದೆ. ಅವರಿಗೆ ಒಳ್ಳೆಯದಾಗಬೇಕು ಎಂಬುದೇ ನನ್ನ ಹಾರೈಕೆ. ವಿಶ್ವಾಮಿತ್ರರು ಇನ್ನು ಕೆಲವೇ ಹಂತ ಮೇಲೇರಬೇಕಿದೆ. ಈಗಲೇ ನಾನೇನಾದರೂ ಬ್ರಹ್ಮರ್ಷಿ ಎಂದು ಅವರನ್ನು ಕರೆದುಬಿಟ್ಟರೆ, ಅದು ಅವರ ಆತ್ಮವಿಕಾಸದಲ್ಲಿ ಬಾಧಕವಾಗುತ್ತದೆ. ಆದ್ದರಿಂದ ಈಗಲೇ ಹಾಗೆ ಕರೆಯಲಾರೆ.”

ಕತ್ತಲೆಯ ಮರೆಯಲ್ಲಿ ಅಡಗಿದ್ದು ಯಾವುದೇ ಕ್ಷಣ ವಸಿಷ್ಠರ ಮೇಲೆರಗಿ ಅವರ ಹತ್ಯೆ ಮಾಡಬೇಕು ಎಂದು ಕಾದಿದ್ದ ವಿಶ್ವಾಮಿತ್ರರ ಕಿವಿಗೆ ಈ ಮಾತುಗಳು ಬೀಳುತ್ತವೆ. ವಿಶ್ವಾಮಿತ್ರರ ಮೈ ನಡುಗಿಹೋಗುತ್ತದೆ. “ಛೆ! ನನ್ನನ್ನು ಪ್ರೀತಿಯಿಂದ ನೆನೆಯುವ, ನನ್ನ ನಿಜಹಿತವನ್ನು ಬಯಸುವ ಈ ಮಹಾತ್ಮನನ್ನೇ ನಾನು ಹೀಗೆ ದ್ವೇಷಿಸುತ್ತಿರುವುದು?”

ಆಯುಧವು ಕೆಳಗೆ ಬೀಳುತ್ತದೆ. ಮರೆಯಿಂದ ಹೊರಬಂದು ವಸಿಷ್ಠರ ಮುಂದೆ ಪ್ರಕಟವಾಗಿ, “ನನ್ನನ್ನು ಕ್ಷಮಿಸು! ನಾನು ನಿನ್ನನ್ನು ಮುಗಿಸಲು ಬಂದಿದ್ದೆ!” ಎನ್ನುತ್ತಾ, ಅವರ ಪಾದಗಳಿಗೆ ಎರಗುತ್ತಾರೆ ವಿಶ್ವಾಮಿತ್ರ.

ದ್ವೇಷ ಹಗೆತನಗಳಿಂದಾಗಿ ವಿಶ್ವಾಮಿತ್ರರು ಕಠಿನಹೃದಯಿಯಾಗಿದ್ದರು. ಈಗವರು ದೀನರಾದರು, ವಿನೀತರಾದರು. ಇದೇ ಅವರಲ್ಲಿ ಆಗಬೇಕಿದ್ದ ಪರಿವರ್ತನೆ. ಈ ಅಂತಿಮ ಪರಿವರ್ತನೆ ಆಗುತ್ತಿದ್ದಂತೆ ವಸಿಷ್ಠರು ಅವರನ್ನು, “ಹೇ ಬ್ರಹ್ಮರ್ಷಿ ವಿಶ್ವಾಮಿತ್ರ!” ಎಂದು ಕರೆದರು!

ತಪ್ಪಿಗೆ ಪಶ್ಚಾತ್ತಾಪವೇ ಮದ್ದು. ತಪ್ಪೊಪ್ಪಿಕೊಂಡು ಕ್ಷಮೆಯನ್ನು ಯಾಚಿಸುವುದರಿಂದ ಪಾಪ ತೊಳೆದುಹೋಗುತ್ತದೆ. ಅಮ್ಮ ಹೇಳುವರಲ್ಲ, `ಜೀರೋ ಆದವನೇ ಹೀರೋ ಆಗಬಲ್ಲ,’ ಎಂದು!

~ ಆಧಾರ