ಶಿವರಾತ್ರಿ

ಅಮ್ಮ ಹೇಳುವರು :

ಅತ್ಯಂತ ಮಂಗಳಕರವಾದ ರಾತ್ರಿ ಎಂದರೆ ಅದು ಶಿವರಾತ್ರಿ. ತ್ಯಾಗ, ತಪಸ್ಸು, ವ್ರತ, ಭಕ್ತಿ, ಜ್ಞಾನ -ಇವೆಲ್ಲಾ ಸೇರಿದ ಹಬ್ಬವಾಗಿದೆ ಶಿವರಾತ್ರಿ. ಇದೆಲ್ಲದರ ಜೊತೆ ಶಿವನನ್ನು ಆರಾಧಿಸಿ ನಾವು ಪರಮವಾದುದನ್ನು ಪಡೆಯುತ್ತೇವೆ. ಅಂದರೆ ನಾವು ಈಶ್ವರನಲ್ಲಿ ಒಂದಾಗುತ್ತೇವೆ.

ರಾತ್ರಿ ಎಂದರೆ ಲೋಕದ ಪಾಲಿಗೆ ಆರಾಮವಾಗಿ ವಿಶ್ರಾಮ ಮಾಡುವ ಸಮಯ. ಆದರೆ ಭಕ್ತನ ಪಾಲಿಗೆ ರಾತ್ರಿಯು ಈಶ್ವರ ಸ್ಮರಣೆಗೆ ಅತ್ಯಂತ ಪ್ರಶಸ್ತವಾದ ಸಮಯ. ಶಿವರಾತ್ರಿಯಲ್ಲಿ ಪ್ರಧಾನ ಅನುಷ್ಠಾನವೆಂದರೆ ಊಟ ನಿದ್ರೆಗಳನ್ನು ಬಿಡುವುದು. ಶರೀರಧರ್ಮಗಳಾದ ಹಸಿವು ದಾಹಗಳನ್ನು ಜಯಿಸಿ, ಅಜ್ಞಾನವೆಂಬ ನಿದ್ರೆಗೆ ಜಾರಿ ಬೀಳದೆ, ನಿಜಜ್ಞಾನದ ಎಚ್ಚರದಲ್ಲಿ ರಾತ್ರಿಯನ್ನು ಕಳೆಯುವುದೇ ಶಿವರಾತ್ರಿ.

ಹೆಚ್ಚಿನ ಜನರು ಲೋಕ ನೀಡುವ ಅಲ್ಪ ಸಂತೋಷದಿಂದ ತೃಪ್ತರಾಗುತ್ತಾರೆ. ಅದೇ ತಮಗೆ ದೊರಕಬಹುದಾದ ಉನ್ನತ ಸಂತೋಷ ಎಂದುಕೊಳ್ಳುತ್ತಾರೆ. ಆದರೆ ಇಂದ್ರಿಯಗಳನ್ನೂ ಮನಸ್ಸನ್ನೂ ಅಂಕೆಯಲ್ಲಿಟ್ಟುಕೊಂಡರೆ, ಅದಕ್ಕೂ ಹೆಚ್ಚಿನ ಸುಖಶಾಂತಿಗಳು ಲಭಿಸುತ್ತವೆ. ವ್ರತಾನುಷ್ಠಾನಗಳು ಆ ಪರಮಸುಖದ ಬಾಗಿಲನ್ನು ತೆರೆಯುವ ಕೀಲಿಕೈಗಳಾಗಿವೆ.

ಇಂದ್ರಿಯಗಳು ಅಲ್ಪಸುಖವನ್ನು ಮಾತ್ರವೇ ತರಬಲ್ಲವು. ಅದನ್ನು ಅನುಭವಿಸಬಾರದು ಎಂದಲ್ಲ. ಅದನ್ನು ಅನುಭವಿಸುವಾಗ, ಅದನ್ನು ಒದಗಿಸಿದ ಈಶ್ವರನ ಪ್ರತಿ ಧನ್ಯವಾದದ ಭಾವವಿರಬೇಕು. ಯಾಕೆಂದರೆ ಯಾವುದಕ್ಕೂ ನಮಗೆ ಕೃಪೆ ಇರಬೇಕು. ಒಂದು ಹಾಡು ಕೇಳಬೇಕೆಂದರೂ ಆಲಿಸುವ ಸಾಮರ್ಥ್ಯ ಕಿವಿಗೆ ಇರಬೇಕು. ಕಿವುಡರಿಗೆ ಹಾಡು ಕೇಳಿಸುವುದಿಲ್ಲ. ಎಷ್ಟೇ ಸುಂದರವಾದ ಜಲಪಾತವು ಎದುರಿಗಿದ್ದರೂ, ಅಂಧರಿಗೆ ಅದು ಕಾಣಿಸುವುದಿಲ್ಲ.

ಹೀಗೆ ಏನನ್ನು ಆಸ್ವಾದಿಸಬೇಕೆಂದರೂ ಈಶ್ವರಾನುಗ್ರಹ ಇರಬೇಕು. ‘ಕೃಪೆಯಿಂದಾಗಿಯೇ ಅದು ದೊರಕಿದ್ದು,’ ಎಂದು ನೆನೆದು, ಎಲ್ಲದರ ಬಗ್ಗೆ ಧನ್ಯತಾಭಾವ ಬೆಳೆಸಿಕೊಳ್ಳಬೇಕು. ಅದೇ ಸಮಯದಲ್ಲಿ ನಾವು ಲೋಕದ ಸ್ವಭಾವವನ್ನು ಮರೆಯದೇ, ‘ಆಸ್ವಾದಿಸುವ ವಸ್ತು ಅಶಾಶ್ವತ,’ ಎಂದು ನೆನೆದಿರಬೇಕು.