ಸರಳ ಸಹಜ ಸುಂದರ ಘನ ಸನಾತನ ಧರ್ಮ

~ ಬ್ರಹ್ಮಚಾರಿ ಬಿಪಿನ್

‘ನಾವು ಆಧುನಿಕತೆಯ ಕದವನ್ನು ತೆರೆದಾಗ, ಅನಂತತೆಯ ಕದವನ್ನು ಮುಚ್ಚಿಕೊಂಡುಬಿಟ್ಟೆವಾ!’ ಎಂದು ಒಬ್ಬ ಹಿರಿಯರು ಆತಂಕದಿಂದ ಹೇಳುವುದನ್ನು ಒಮ್ಮೆ ಕೇಳಿದೆ. ‘ನಮ್ಮ ಪುರಾತನರು ಅನಂತಸತ್ಯದೆಡೆಗೆ ನಾವು ಸಾಗಲು ಉತ್ತಮ ಮಾರ್ಗವನ್ನು ಬಹಳ ಪರಿಶ್ರಮದಿಂದ ರೂಪಿಸಿಟ್ಟಿದ್ದಾರೆ. ಅದು ನಮ್ಮ ಸಂಸ್ಕಾರದಲ್ಲಿ ಪರಂಪರೆಯಾಗಿ ಇಳಿದುಬಂದಿದೆ. ಅವುಗಳೊಂದಿಗೆ ಸಂಪರ್ಕ ಕಡಿದುಕೊಂಡರೆ, ನಾವು ಬಹುಬೇಗ ಅಸ್ವಸ್ಥರಾಗಿ ಒಂಟಿಯಾಗಿಬಿಡುತ್ತೇವೆ.’

ಕಳೆದವರ್ಷ ಅಮ್ಮನವರ ಜನ್ಮದಿನದ ಸಂದರ್ಭದಲ್ಲಿ ‘ಅಮೃತಕೀರ್ತಿ ಪ್ರಶಸ್ತಿ’ಯನ್ನು ಪಡೆದ ಶ್ರೇಷ್ಠ ಕವಿ ಶ್ರೀ ಮಧುಸೂದನ ನಾಯರ್ ಅವರು ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಹೇಳಿದ್ದು ನೆನಪಾಗುತ್ತಿದೆ. “ಕಳೆದ ಎರಡು ಪೀಳಿಗೆಯ ಜನರು ತಪ್ಪಾದ ಚಿಂತನೆಗಳನ್ನು ತಮ್ಮದಾಗಿಸಿಕೊಂಡು, ‘ಹಳೆಯದೆಲ್ಲಾ ಹಳಸಿದ್ದು,’ ಎಂದು ಹೇಳಿ, ನಮ್ಮ ಹಿರಿಯರು ತಮ್ಮ ಸ್ವಂತ ಅನುಭವದಲ್ಲಿ ಕಂಡುಕೊಂಡು, ಅಮೂಲ್ಯವೆಂದು ಕಾಪಾಡಿಕೊಂಡುಬಂದು, `ಮುಂದಿನವರಿಗೆ ಪ್ರಯೋಜನವಾಗಲಿ,’ ಎಂದು, ಉಪದೇಶದ ಮೂಲಕ, ಶಿಕ್ಷಣದ ಮೂಲಕ ಹಾಗೂ ಸೋದಾಹರಣೆಯ ಮೂಲಕ ಕಲಿಸಿದ್ದನ್ನೆಲ್ಲಾ ಗಾಳಿಗೆ ತೂರಿದ್ದಾರೆ.”

ಮುಂದುವರಿದು, “ಆದರೆ ಕೆಲವೇ ದಶಕಗಳ ಹಿಂದೆ ಹೀಗಿರಲಿಲ್ಲ. ಹಿರಿಯರು ಕಿರಿಯರಿಗೆ ಕಲಿಸುತ್ತಿದ್ದರು. ಹೇಳಿಕೊಡುತ್ತಿದ್ದರು,” ಎಂದರು.

ಕವಿ ನಾಯರ್ ಅವರು ಒಂದು ಘಟನೆಯನ್ನು ಅಭಿನಯಪೂರ್ವಕ ಪ್ರಸ್ತುತ ಪಡಿಸಿದರು.

ಭಾಷಣ ಮುಂದುವರಿಸುತ್ತಾ ಕವಿ ನುಡಿದರು, “ಮಾವಿನಹಣ್ಣು ಕೀಳಲು ಹೋದ ಹುಡುಗರಿಗೆ ತಾಯಿ ಇಷ್ಟು ಘನವಿಚಾರಗಳನ್ನು ತಿಳಿಸಿಕೊಟ್ಟು, ಧರ್ಮಾಧರ್ಮಗಳನ್ನು ಕಲಿಸಿದಳು.”

ಧರ್ಮ ಎಂದರೇನು? “ಧಾರಯತೇ ಇತಿ ಧರ್ಮಃ” ಎಂದಿದೆ ವ್ಯಾಖ್ಯಾನ. ಯಾವುದು ಧರಿಸುತ್ತದೆ, ಹಾಗೂ ಪೊರೆಯುತ್ತದೆ ಅದು ಧರ್ಮ. ‘ಬೃಹತ್ತಾದ ಬ್ರಹ್ಮನಿಂದ ಹಿಡಿದು ತೃಣದ ವರೆಗೆ ಸೃಷ್ಟಿಯಲ್ಲಿರುವ ಪ್ರತಿಯೊಂದನ್ನೂ ಧರಿಸಿಕೊಂಡಿರುವುದು ಧರ್ಮ,’ ಎಂದು ಶಾಸ್ತçಗಳಲ್ಲಿ ಹೇಳಿದೆ.

ಪ್ರಕೃತಿಯು ಧರ್ಮದ ತತ್ತ್ವಗಳ ಆಧಾರದ ಮೇಲೇ ನಡೆಯುತ್ತಿದೆ. ಉದಾಹರಣೆಗೆ ಮಾವಿನಮರವು ಎಲ್ಲೇ ಇದ್ದರೂ ಅದು ಮಾವಿನಮರದ ಗುಣಗಳಿಗೆ ಅನುಸಾರವಾಗಿಯೇ ಸದಾ ವರ್ತಿಸುತ್ತದೆ.

ಪ್ರಕೃತಿಯಲ್ಲಿ ಪರಸ್ಪರ ಕೊಡು-ಕೊಳೆ ಇರುತ್ತದೆ. ಪರಸ್ಪರ ತ್ಯಾಗ ಮತ್ತು ಸ್ವೀಕಾರಗಳಿರುತ್ತದೆ. ಪಡೆಯಬಯಸುವವನು ನೀಡಲೂ ಸಿದ್ಧನಿರಬೇಕು. ಇದೇ ರೀತಿ, ಧರ್ಮವೂ; ನಾವು ಅದನ್ನು ಪೋಷಿಸಿದರೆ ಮಾತ್ರವೇ ಅದು ನಮ್ಮನ್ನು ರಕ್ಷಿಸಬಲ್ಲದು ಎಂದು ತಿಳಿಯಬೇಕು. ಇದನ್ನೇ ‘ಧರ್ಮೋ ರಕ್ಷತಿ ರಕ್ಷಿತಃ’ ಎನ್ನುವುದು.

ನಾವು ಧರ್ಮವನ್ನು ಹೇಗೆ ರಕ್ಷಿಸಬೇಕು? ಧರ್ಮವನ್ನು ಪಾಲಿಸುವುದರ ಮೂಲಕ. ನಾವು ಧರ್ಮವನ್ನು ಪಾಲಿಸಿದರೆ ಧರ್ಮ ಉಳಿಯುತ್ತದೆ, ಮತ್ತು ಮುಂದುವರೆಯುತ್ತದೆ. ನಾವು ಕಟ್ಟಿದ ಮನೆ ನಮಗೆ ಸುರಕ್ಷಿತತೆ ನೀಡುತ್ತದೆಯಲ್ಲವೆ? ಹಾಗೆ.

ನಾವು ಹಿರಿಯ ಪೀಳಿಗೆಯವರೇ ಇಡೀ ಸೃಷ್ಟಿಯನ್ನು ನಡೆಸುತ್ತಿರುವ ಈ ಧರ್ಮವನ್ನು ಕಡೆಗಾಣಿಸಿದರೆ, ಅದರ ಪ್ರತಿ ಅವಜ್ಞೆ ತೋರಿದರೆ, ಅದು ಬಹುಬೇಗ ಇತರರ ಮನೋಭಾವವಾಗಿಬಿಡುತ್ತದೆ. ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾದ ಯುವಜನತೆಯೇ ಧರ್ಮವನ್ನು ಅರಿಯದೇ, ಅಥವಾ ಅರಿಯಲು ಪ್ರಯತ್ನಿಸದೇ ಅವಜ್ಞೆ ಮಾಡುತ್ತಿರುವುದು ನೋಡಿದರೆ, ಸೂತ್ರ ಕತ್ತರಿಸಿಕೊಂಡ ಗಾಳಿಪಟ ಎತ್ತ ಹಾರಿ, ಕಡೆಗೆ ಯಾವ ಮುಳ್ಳುಕಂಟಿಗಳ ಮೇಲೆ ಬೀಳುತ್ತದೆಯೋ?! ಎಂದು ಭಯವಾಗುತ್ತದೆ.

ಸನಾತನ ಧರ್ಮವು ಯಾವುದೇ ಒಂದು ಗ್ರಂಥದ ಮೇಲೆ ನಿಂತಿರುವ ರಿಲೀಜಿಯನ್ ಅಲ್ಲ. ಮತವಲ್ಲ. ಸ್ವಾಮಿ ಚಿನ್ಮಯಾನಂದರನ್ನು ವಿದೇಶದಲ್ಲಿ ಯಾರೋ ಕೇಳಿದರಂತೆ, “ನಿಮ್ಮ ಮತದ ಆಧಾರಗ್ರಂಥ ಯಾವುದು?” ಎಂದು. ಸ್ವಾಮೀಜಿ ಹೇಳಿದರಂತೆ, “ಸನಾತನ ಧರ್ಮದಲ್ಲಿ ಒಂದಲ್ಲ, ಅನೇಕ ಶಾಸ್ತçಗ್ರಂಥಗಳ ಗ್ರಂಥಾಲಯವೇ ಇದೆ.” ಹಾಗಾಗಿ ಸನಾತನವಾದ ಹಿಂದೂಧರ್ಮವನ್ನು ಮತ ಎನ್ನಲಾಗದು; ಇದನ್ನು ಇತರ ಮತ ಅಥವಾ ರಿಲೀಜಿಯನ್ ಜೊತೆಗೆ ಹೋಲಿಸಲೂ ಆಗದು. ಇದು ಎಲ್ಲೂ ಯಾವುದಕ್ಕೂ ಸೀಮಿತವಾಗಿಲ್ಲ; ವೈಶಾಲ್ಯತೆಯೇ ಇದರ ಹೆಗ್ಗುರುತು. ಹಾಗಾಗಿ ಇಷ್ಟು ಉದಾತ್ತವಾದ ಸನಾತನ ಧರ್ಮವನ್ನು ಹಾಗೂ ಈ ಸಂಸ್ಕಾರವನ್ನು ನಾವು ಪಾಲಿಸಿ, ರಕ್ಷಿಸಿ, ಪೋಷಿಸಬೇಕಿದೆ.

ಧರ್ಮಕ್ಕೆ ಗ್ರಾಹ್ಯವಾದ ಯಾವುದೇ ರೂಪವಿಲ್ಲ. ಅದು ನಮ್ಮೆಲ್ಲರಲ್ಲಿ, ನಮ್ಮ ಮನೋಭಾವದಲ್ಲಿ, ನಮ್ಮ ಆಚರಣೆಯಲ್ಲಿ ಅಂತರ್ಗತವಾಗಿದೆ. ಧರ್ಮದ ಉನ್ನತಿಗಾಗಲೀ ಅಧೋಗತಿಗಾಗಲೀ ನಾವೇ ಕಾರಣರು. ನಮ್ಮ ಮನೋಭಾವ, ನಮ್ಮ ಕ್ರಿಯೆಗಳೇ ಕಾರಣಗಳು.

ಇದಕ್ಕೆ ಉದಾಹರಣೆಯಾಗಿ ಅಮ್ಮನ ಈ ಮಾತುಗಳನ್ನು ಉದ್ದರಿಸುತ್ತೇನೆ: “ಒಂದು ವೇಳೆ ಪ್ರಕೃತಿಯು ವಿನಾಶವನ್ನು ಹೊಂದಿದರೆ ಮನುಷ್ಯನ ಅಸ್ತಿತ್ವವೇ ಕಡೆಯಾಗುತ್ತದೆ. ಆದರೆ ಮನುಷ್ಯನೇನಾದರೂ ಪೂರ್ತಿ ನಿರ್ನಾಮವಾದರೆ ಆಗ ಪ್ರಕೃತಿಯು ಅನತಿಕಾಲದಲ್ಲೇ ಚೇತರಿಸಿಕೊಂಡು, ಸಮೃದ್ಧವಾಗುತ್ತದೆ.”

ಇಂದಿನ ನಮ್ಮ ಅನೇಕ ಸಮಸ್ಯೆಗಳಿಗೆ ಕಾರಣ ನಾವೀ ಧಾರ್ಮಿಕ ಸಂಸ್ಕಾರವನ್ನು ದೂರಮಾಡಿರುವುದೇ ಆಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಕುಟುಂಬ ವ್ಯವಸ್ಥೆಯದು; ಧರ್ಮಬದ್ಧರಲ್ಲದ ಜನರ ನಡುವೆ ಮನುಷ್ಯಸಹಜ ಸ್ನೇಹ, ಸೌಹಾರ್ದ, ಬಂಧುಬಾಂಧವ ಭಾವಗಳೇ ಇಲ್ಲವಾಗಿವೆ; ಇದು ವೈಮನಸ್ಯ, ಅಶಾಂತಿ, ಹಿಂಸಾಚಾರಗಳಿಗೆ ಕಾರಣವಾಗಿವೆ.

ನಾವು ನಮ್ಮ ಮೂಲಗಳಿಗೆ ಹೋಗಲೇ ಬೇಕಿದೆ. ಬೇರೆ ಯಾವುದೇ ಸಂಸ್ಕಾರದಲ್ಲಿ ಒಳಿತನ್ನು ಕಂಡುಹಿಡಿದು ಒಪ್ಪಿಕೊಳ್ಳಲು ಸಿದ್ಧವಿರುವ ನಾವು ನಮ್ಮದೇ ಮೂಲವನ್ನು ಹೊರಳಿನೋಡಲು ಹಿಂಜರಿಯಬಾರದು.

ಧರ್ಮವನ್ನು ಸ್ವೀಕರಿಸುವ ಜನರು ಕಾಲದೇಶಗಳಿಗೆ ಅನುಸಾರವಾಗಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಸಿದ್ಧರಿರುತ್ತಾರೆ; ಧರ್ಮವನ್ನು ವಿರೋಧಿಸಲು ನಿರ್ಧರಿಸಿಕೊಂಡವರಲ್ಲಿ ಧರ್ಮಾಚರಣೆಯ ಯಾವುದೋ ಕಾಲದೇಶದ ಕುಂದುಕೊರತೆಗಳನ್ನು ಎತ್ತಿ, ಇಡೀ ಧರ್ಮವನ್ನು ಹೀಗಳೆಯುವ ಪ್ರವೃತ್ತಿ ಕಂಡುಬರುತ್ತದೆ. ನಮಗೆ ಇಂದಿಗೆ ಸೂಕ್ತವಲ್ಲದ ವಿಚಾರವನ್ನು, ‘ಹಿಂದೊಂದು ಕಾಲದಲ್ಲಿ ಹೀಗಿತ್ತು,’ ಎಂಬ ಸೂಕ್ತ ವಿವೇಚನೆಯಿಂದ ಮನಗಂಡು, ಅದನ್ನು ಪಕ್ಕಕ್ಕಿಟ್ಟು, ಸಕಾರಾತ್ಮಕವಾಗಿ ‘ನಾವು ಆಧುನಿಕತೆಯ ಕದವನ್ನು ತೆರೆದಾಗ ಅನಂತತೆಯ ಕದವನ್ನು ಮುಚ್ಚಿಕೊಂಡುಬಿಟ್ಟೆವಾ!’ ಮುಂದುವರಿಯಬಹುದು. ಉದಾಹರಣೆಗೆ ‘ಮನು ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ! ಎಂದಿದ್ದಾನೆ!’ ಎಂದು ರೋಷದ ಆಕ್ಷೇಪ ಆಗಾಗ ಅಲ್ಲಲ್ಲಿ ಕೇಳಿಬರುತ್ತಿರುತ್ತದೆ.

ಅಸಂಖ್ಯಾತ ಶಾಸ್ತçಗ್ರಂಥಗಳ ಗ್ರಂಥಾಲಯದಲ್ಲಿ ಒಂದು ಪುಸ್ತಕದಲ್ಲಿ ಒಬ್ಬಾತ ಹೀಗೆ ಹೇಳಿದ್ದರೆ, ಅದನ್ನು ಟೀಕೆಯ ಅಸ್ತçವಾಗಿ ಬಳಸುವ ಬದಲು, ಆ ಮಾತನ್ನು ನಿಜಕ್ಕೂ ತೀಕ್ಷ್ಣ ವಿಶ್ಲೇಷಣೆಗೆ ಒಳಪಡಿಸಬಹುದು: ಮನು ಅಂದರೆ ಯಾರು?  ಸ್ಮೃತಿ ಎಂದರೆ ಏನು? ಯಾವ ಕಾಲಘಟ್ಟದಲ್ಲಿ, ಯಾವ ಸಮಾಜದಲ್ಲಿ ಹಾಗಿತ್ತು? ಎಲ್ಲೆಡೆಯೂ ಹಾಗಿತ್ತೇ? ಅಥವಾ ಅವನ ಕಾಲದೇಶದಲ್ಲಿ ಹಾಗಿತ್ತೆ? ಅದು ನಿಯಮವಾಗಿತ್ತೆ ಅಥವಾ ಅಪವಾದವೆ? ಆ ನುಡಿಗಳ ಅರ್ಥ ಇಂದು ಕೊಂಚ ಬೇರೆಯಾಗಿರಬಹುದೆ? -ಎಂದು ಸ್ಟಡಿ ಮಾಡಬೇಕು. ಗ್ರಂಥಗಳು ಲಭ್ಯವಿವೆ!

ಅಮ್ಮನ ಈ ಎರಡೂ ನುಡಿಗಳನ್ನು ಸೇರಿಸಿದಾಗ ನನಗೆ ಅಮ್ಮನದೇ ಆದ ಈ ನುಡಿಗಳು ನೆನಪಾಗುತ್ತವೆ, “ಮಕ್ಕಳೆ! ಅವಶ್ಯಕತೆ ಇರುವಷ್ಟನ್ನು ಮಾತ್ರ ತೆಗೆದುಕೊಳ್ಳುವುದೇ ಧರ್ಮ.”

ಈ ಮಾತು ನಮ್ಮ ಜೀವನದ ಎಲ್ಲಾ ರಂಗಗಳಿಗೆ ಅನ್ವಯಿಸುತ್ತದೆ. ಎಲ್ಲ ಜೀವಿಗಳಿಗೂ ಶ್ರೇಷ್ಠನೆನಿಸಿದ ನಾವು ಮನುಷ್ಯರು ಈಶ್ವರ, ಪ್ರಕೃತಿ, ಎಲ್ಲಾ ಜೀವಿಗಳೂ -ಇವರ ನಡುವಿನ ಪರಸ್ಪರ ಸಂಬಂಧದ ಬಗ್ಗೆ ಬೋಧವಂತರಾಗಬೇಕು.