Author: Sandhya

  • ಶಿವರಾತ್ರಿ

    ಶಿವರಾತ್ರಿ

    ಅಮ್ಮ ಹೇಳುವರು :

    ಅತ್ಯಂತ ಮಂಗಳಕರವಾದ ರಾತ್ರಿ ಎಂದರೆ ಅದು ಶಿವರಾತ್ರಿ. ತ್ಯಾಗ, ತಪಸ್ಸು, ವ್ರತ, ಭಕ್ತಿ, ಜ್ಞಾನ -ಇವೆಲ್ಲಾ ಸೇರಿದ ಹಬ್ಬವಾಗಿದೆ ಶಿವರಾತ್ರಿ. ಇದೆಲ್ಲದರ ಜೊತೆ ಶಿವನನ್ನು ಆರಾಧಿಸಿ ನಾವು ಪರಮವಾದುದನ್ನು ಪಡೆಯುತ್ತೇವೆ. ಅಂದರೆ ನಾವು ಈಶ್ವರನಲ್ಲಿ ಒಂದಾಗುತ್ತೇವೆ.

    ರಾತ್ರಿ ಎಂದರೆ ಲೋಕದ ಪಾಲಿಗೆ ಆರಾಮವಾಗಿ ವಿಶ್ರಾಮ ಮಾಡುವ ಸಮಯ. ಆದರೆ ಭಕ್ತನ ಪಾಲಿಗೆ ರಾತ್ರಿಯು ಈಶ್ವರ ಸ್ಮರಣೆಗೆ ಅತ್ಯಂತ ಪ್ರಶಸ್ತವಾದ ಸಮಯ. ಶಿವರಾತ್ರಿಯಲ್ಲಿ ಪ್ರಧಾನ ಅನುಷ್ಠಾನವೆಂದರೆ ಊಟ ನಿದ್ರೆಗಳನ್ನು ಬಿಡುವುದು. ಶರೀರಧರ್ಮಗಳಾದ ಹಸಿವು ದಾಹಗಳನ್ನು ಜಯಿಸಿ, ಅಜ್ಞಾನವೆಂಬ ನಿದ್ರೆಗೆ ಜಾರಿ ಬೀಳದೆ, ನಿಜಜ್ಞಾನದ ಎಚ್ಚರದಲ್ಲಿ ರಾತ್ರಿಯನ್ನು ಕಳೆಯುವುದೇ ಶಿವರಾತ್ರಿ.

    ಹೆಚ್ಚಿನ ಜನರು ಲೋಕ ನೀಡುವ ಅಲ್ಪ ಸಂತೋಷದಿಂದ ತೃಪ್ತರಾಗುತ್ತಾರೆ. ಅದೇ ತಮಗೆ ದೊರಕಬಹುದಾದ ಉನ್ನತ ಸಂತೋಷ ಎಂದುಕೊಳ್ಳುತ್ತಾರೆ. ಆದರೆ ಇಂದ್ರಿಯಗಳನ್ನೂ ಮನಸ್ಸನ್ನೂ ಅಂಕೆಯಲ್ಲಿಟ್ಟುಕೊಂಡರೆ, ಅದಕ್ಕೂ ಹೆಚ್ಚಿನ ಸುಖಶಾಂತಿಗಳು ಲಭಿಸುತ್ತವೆ. ವ್ರತಾನುಷ್ಠಾನಗಳು ಆ ಪರಮಸುಖದ ಬಾಗಿಲನ್ನು ತೆರೆಯುವ ಕೀಲಿಕೈಗಳಾಗಿವೆ.

    ಇಂದ್ರಿಯಗಳು ಅಲ್ಪಸುಖವನ್ನು ಮಾತ್ರವೇ ತರಬಲ್ಲವು. ಅದನ್ನು ಅನುಭವಿಸಬಾರದು ಎಂದಲ್ಲ. ಅದನ್ನು ಅನುಭವಿಸುವಾಗ, ಅದನ್ನು ಒದಗಿಸಿದ ಈಶ್ವರನ ಪ್ರತಿ ಧನ್ಯವಾದದ ಭಾವವಿರಬೇಕು. ಯಾಕೆಂದರೆ ಯಾವುದಕ್ಕೂ ನಮಗೆ ಕೃಪೆ ಇರಬೇಕು. ಒಂದು ಹಾಡು ಕೇಳಬೇಕೆಂದರೂ ಆಲಿಸುವ ಸಾಮರ್ಥ್ಯ ಕಿವಿಗೆ ಇರಬೇಕು. ಕಿವುಡರಿಗೆ ಹಾಡು ಕೇಳಿಸುವುದಿಲ್ಲ. ಎಷ್ಟೇ ಸುಂದರವಾದ ಜಲಪಾತವು ಎದುರಿಗಿದ್ದರೂ, ಅಂಧರಿಗೆ ಅದು ಕಾಣಿಸುವುದಿಲ್ಲ.

    ಹೀಗೆ ಏನನ್ನು ಆಸ್ವಾದಿಸಬೇಕೆಂದರೂ ಈಶ್ವರಾನುಗ್ರಹ ಇರಬೇಕು. ‘ಕೃಪೆಯಿಂದಾಗಿಯೇ ಅದು ದೊರಕಿದ್ದು,’ ಎಂದು ನೆನೆದು, ಎಲ್ಲದರ ಬಗ್ಗೆ ಧನ್ಯತಾಭಾವ ಬೆಳೆಸಿಕೊಳ್ಳಬೇಕು. ಅದೇ ಸಮಯದಲ್ಲಿ ನಾವು ಲೋಕದ ಸ್ವಭಾವವನ್ನು ಮರೆಯದೇ, ‘ಆಸ್ವಾದಿಸುವ ವಸ್ತು ಅಶಾಶ್ವತ,’ ಎಂದು ನೆನೆದಿರಬೇಕು.  

  • ಅಮ್ಮನ ಸಂದೇಶ

    ಅಮ್ಮನ ಸಂದೇಶ

    ಪ್ರತಿಯೊಬ್ಬರೂ ಎಲ್ಲರಿಗಾಗಿ! ಎಲ್ಲರೂ ಪ್ರತಿಯೊಬ್ಬರಿಗಾಗಿ!” ಮಕ್ಕಳೆ, ಈ ಭಾವದಲ್ಲಿ ನಾವು ಜೀವನ ಸಾಗಿಸಬೇಕು.

    ೨೧ನೇ ಶತಮಾನದ ಕಾಲುಭಾಗ ಮುಗಿಯುವ ಈ ಹೊತ್ತು ನಮ್ಮ ಲೋಕದ ಅವಸ್ಥೆ ಏನಾಗಿದೆ? ಕೆಲವೆಡೆ ಜನರ ನಡುವಿನ ಕಲಹಗಳಿಂದ ಜನ ಕಷ್ಟಪಡುತ್ತಿದ್ದಾರೆ. ಇನ್ನು ಕೆಲವೆಡೆ ಅಧಿಕಾರಕ್ಕಾಗಿ ಸಂಘರ್ಷಗಳು ನಡೆದಿವೆ. ಮತ್ತೆ ಕೆಲವೆಡೆ, ಯುದ್ಧದ ಭೀತಿಯಿಂದ, ವಿನಾಶದಿಂದ ಜನ ನಲುಗುತ್ತಿದ್ದಾರೆ. ಕೆಲವೆಡೆ ಆತಂಕವಾದಿಗಳ ಹಿಡಿತದಲ್ಲಿ ಜನ ಸಿಲುಕಿದ್ದಾರೆ. ಆ ಸ್ಥಳಗಳಲ್ಲಿ ಹೆಣ್ಣುಮಕ್ಕಳು, ಸಣ್ಣಮಕ್ಕಳು ಹಾಗೂ ಮಹಿಳೆಯರು ಅಪಾರ ಕಷ್ಟಗಳಿಗೆ ಸಿಕ್ಕಿರುತ್ತಾರೆ. ಕೆಲವು ದೇಶಗಳಲ್ಲಿ ಊಟ ಸಿಗದೆ, ಹಸಿವಿನಿಂದ ಕಂಗಾಲಾದ ಕೂಸುಗಳು ತಮ್ಮ ಕೈಯನ್ನೇ ಕಡಿದುಕೊಳ್ಳುತ್ತಿವೆ. ಹೀಗೆ, ರೋಗ, ಹಸಿವು, ಅಸಹಾಯಕತೆ- ನಿಲ್ಲದ ಕಣ್ಣೀರು, ಮುಗಿಯದ ವೇದನೆ. ಇದೇ ಇಂದಿನ ಲೋಕದ ಭೀಕರವಾದ ಅವಸ್ಥೆ.

    ಲೋಕದ ವಿವಿಧ ಭಾಗಗಳಲ್ಲಿ ಸುಮಾರು ೨೦೦ ಕೋಟಿ ಜನರಾದರೂ ಇಂಥ ವಿವಿಧ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ, “ಪ್ರತೀಕ್ಷೆಗಳೆಲ್ಲಾ ನಿರಾಶೆಯಲ್ಲಿ ಮುಗಿಯುತ್ತಿವೆಯೇ!” ಎಂದು ಭಯವಾಗುತ್ತದೆ. ಇವತ್ತಿಗೂ ಸಹ ಮನುಷ್ಯರು ಪರಸ್ಪರರನ್ನು ಅರ್ಥಮಾಡಿಕೊಳ್ಳಲಾಗದೆ ಕಲಹಕ್ಕಿಳಿಯುತ್ತಾರೆ. ಹೀಗಿರುವಾಗ `ಪರಿಸ್ಥಿತಿಯಲ್ಲಿ ಬದಲಾವಣೆ ತರಲು ನಾವೇನು ಮಾಡಬಹುದು?’ ಎಂದು ಚಿಂತಿಸಬೇಕು. ಸಾಧ್ಯವಾದುದನ್ನು ಮಾಡಲೇಬೇಕು. ಅದು ಚಿಕ್ಕದೇ ಆದರೂ ಸಹ. ಒಬ್ಬರ ಕಣ್ಣೀರನ್ನು ಒರೆಸಲು ಸಾಧ್ಯವಿದ್ದರೆ, ನಾವು ಹಾಗೆ ಮಾಡಲೇ ಬೇಕು.

    ನಾವು ಒಳ್ಳೆಯ ಚಿಂತೆಗಳನ್ನು ಬೆಳೆಸಿಕೊಳ್ಳಬೇಕು. ಒಂದು ಪ್ರಯತ್ನದಲ್ಲಿ ತೊಡಗುತ್ತೇವೆ; ಆಗ ನಮ್ಮ ಉಪಬೋಧ ಮನಸ್ಸಿನಲ್ಲಿ ಸೋಲು ಗೆಲವುಗಳ ಬಗ್ಗೆ ಸಂಕಲ್ಪಗಳು ಏಳುತ್ತವೆ. ಆ ಸಂಕಲ್ಪಗಳು ನಮ್ಮ ಯಶಸ್ಸಿಗೆ ಬಹುಪಾಲು ಕೊಡುಗೆ ನೀಡುತ್ತವೆ. ಉಪಬೋಧ ಮನಸ್ಸಿನಲ್ಲಿ ಶುಭಪ್ರತೀಕ್ಷೆಗಳಿದ್ದರೆ ವಿಜಯದ ಸಾಧ್ಯತೆ ಹೆಚ್ಚಿಗಿರುತ್ತದೆ. ಉಪಬೋಧ ಮನಸ್ಸಿನಲ್ಲಿ ಶುಭಪ್ರತೀಕ್ಷೆಯನ್ನು ಹೆಚ್ಚಿಸಿಕೊಳ್ಳಲು ಮಾರ್ಗ ಯಾವುದು? ಒಂದೇ ಮಾರ್ಗ: ಬೋಧಮನಸ್ಸಿನಲ್ಲಿ ಸುಪ್ರತೀಕ್ಷೆಗಳನ್ನು, ಸಕಾರಾತ್ಮಕ ಚಿಂತೆಗಳನ್ನು ಹೆಚ್ಚಿಸಿಕೊಳ್ಳಬೇಕು. ಆಗ, ಕ್ರಮೇಣ ಉಪಬೋಧ ಮನಸ್ಸಿನಲ್ಲೂ ಒಳ್ಳೆಯ ಚಿಂತೆಗಳು ತುಂಬುವುವು. ಆಗ ನಮ್ಮ ವಿಜಯದ ಸಾಧ್ಯತೆಗಳು ಹಲವುಪಟ್ಟು ಹೆಚ್ಚುತ್ತವೆ. ಆದ್ದರಿಂದ ಬೋಧಮನಸ್ಸಿನಲ್ಲಿ ನಾವು ಸದಾ ಕಾಲ ಒಳ್ಳೆಯ ಚಿಂತೆಗಳನ್ನು ಬೆಳೆಸಿಕೊಳ್ಳಬೇಕು. ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ಕಾಡ್ಗಿಚ್ಚು ಹತ್ತಿತು. ಎಕರೆಗಟ್ಟಲೆ ಕಾಡು ಬೂದಿಯಾಯಿತು. ಆದರೆ ಆ ಬೂದಿಯಿಂದಲೇ ಸಣ್ಣ ಪುಟ್ಟ ಗಿಡಗಳು ಮೇಲೆದ್ದು, ಹೂವು ಬಿರಿಯತೊಡಗಿದವು. ಅವು ಬಹುವಿಶೇಷವಾದ ಗಿಡಗಳು. ಶಾಖ ಹೊಗೆ ಇವಿರುವ ಕಡೆ ಮಾತ್ರ ಈ ಬೀಜ ಮೊಳೆತು ಗಿಡವಾಗುವುದು!

    ಹೀಗೆ, ಅಡಚಣೆಗಳಿಗೆ ನಮ್ಮ ಆಂತರಿಕ ಶಕ್ತಿಯನ್ನು ಜಾಗೃತಮಾಡುವ ಸಾಮರ್ಥ್ಯವಿದೆ. ನಿಜವಾದ ಶಕ್ತಿವಂತರು ಯಾರೆಂದು ಅವು ತೋರಿಸುತ್ತವೆ. ಅಡಚಣೆ ಎದುರಾದಾಗ ದುರ್ಬಲರು ಬೀಳುವರು. ಧೈರ್ಯವಂತರಾದರೋ ಅಡಚಣೆಯನ್ನೇ ಯಶಸ್ಸಿಗೆ ಮೆಟ್ಟಿಲಾಗಿಸಿಕೊಳ್ಳುವರು. ಕಷ್ಟಗಳಿಂದ ನಾವು ಪಾಠ ಕಲಿಯಬಹುದು. ಉದಾಹರಣೆಗೆ -ಅಗತ್ಯವಿರುವುದನ್ನು ತೆಗೆದುಕೊಳ್ಳುವುದು, ಆಸೆಗಳ ಬೆನ್ನುಹತ್ತದಿರುವುದು -ಇದನ್ನು ಕಲಿಯುತ್ತೇವೆ. ಆಧ್ಯಾತ್ಮ ಪಾಲಿಸುವವರು ಹಾಗೇ ಮಾಡುವರು. ಎಲ್ಲದಕ್ಕೂ ಧನ್ಯವಾದ ಹೇಳುತ್ತಾ ಮುಂದೆಮುಂದೆ ಸಾಗುವರು. ತೆಗೆದುಕೊಳ್ಳುವಾಗ ‘ಧನ್ಯವಾದ!’ ಹೇಳುವರು. ಕೊಡುವಾಗಲೂ ‘ಧನ್ಯವಾದ!’ ಹೇಳುವರು. ಇದು ಹೀಗೇ ಒಂದು ಧನಾತ್ಮಕ ಶೃಂಖಲೆಯಾಗಿ ಮುಂದುವರಿಯುತ್ತದೆ.

  • ಸಂಪಾದಕೀಯ

    ‘ಕನ್ನಡ ಮಾತೃವಾಣಿ’ಗೆ ೨೮ ವರ್ಷ ತುಂಬಿತು.

    ‘ಕನ್ನಡ ಮಾತೃವಾಣಿ’ ಎಂದೇಕೆ ಹೇಳುವುದು? ‘ಮಾತೃವಾಣಿ’ ಎಂದರೆ ಸಾಕಿತ್ತಲ್ಲ!?

    ಇಲ್ಲ. ಸಾಲದು. ‘ಮಾತೃವಾಣಿ’ ಎಂಬುದು ಒಟ್ಟು ೭ ವಿದೇಶಿ ಭಾಷೆಗಳಲ್ಲಿ ಮತ್ತು ೧೦ ಭಾರತೀಯ ಭಾಷೆಗಳಲ್ಲಿ ಹೊರಬರುತ್ತಿರುವ ಆಧ್ಯಾತ್ಮಿಕ ಪತ್ರಿಕೆಯಾಗಿದೆ. ಅವುಗಳಲ್ಲಿ ಕನ್ನಡ ಪತ್ರಿಕೆಯೂ ಒಂದು.

    ಪ್ರತಿಯೊಂದು ಭಾಷೆಯ ಪತ್ರಿಕೆಯ ಒಕ್ಕಣೆಯಲ್ಲಿ ವೈವಿಧ್ಯತೆಯಿರುತ್ತದೆ, ಆಯಾ ಭಾಷೆ ಪ್ರಾಂತ್ಯಗಳಿಗೆ ಅದು ಅನುಯೋಜ್ಯವಾಗಿರುತ್ತದೆ. ಆದ್ದರಿಂದ ‘ಕನ್ನಡ ಮಾತೃವಾಣಿ’ ‘ಮಲಯಾಳಂ ಮಾತೃವಾಣಿ,’ ‘ಇಂಗ್ಲೀಷ್ ಮಾತೃವಾಣಿ’ ‘ಜಪಾನೀಸ್ ಮಾತೃವಾಣಿ’ ‘ಫ್ರೆಂಚ್ ಮಾತೃವಾಣಿ’ ಎಂದು ಪ್ರತ್ಯೇಕವಾಗಿ ಹೇಳಲೇಬೇಕಾಗಿದೆ.

    ಈಗಾದರೋ ಜನರ ಕೈಯಲ್ಲಿ ಮೊಬೈಲ್ ಇರುತ್ತದೆ; ಜಗತ್ತಿನ ಯಾವ ಭಾಷೆಯಲ್ಲಿ ಬೇಕಾದರೂ, ಜಗತ್ತಿನಲ್ಲಿ ಯಾರೊಂದಿಗೆ ಬೇಕಾದರೂ ಲೈವ್ ಸಂಪರ್ಕ ಹೊಂದಬಹುದು. ಆದರೆ ದಶಕಗಳ ಹಿಂದೆಯೇ ಕೇರಳದ ಪರ್ಯಾಯದ್ವೀಪವೊಂದರ ಕುಗ್ರಾಮವೊಂದರಲ್ಲಿ -ಇಂದಿನ ಅಮೃತಪುರಿಯಲ್ಲಿ- ಪ್ರಿಂಟಿಂಗ್ ಪ್ರೆಸ್ ಇತ್ತು, ಅದು ಪರಮಪೂಜ್ಯ ಅಮ್ಮನವರ ಸಂದೇಶವನ್ನು ಹಲವಾರು ಭಾಷೆಗಳ ಪತ್ರಿಕೆಯ ಮುಖಾಂತರ ಲೋಕಕ್ಕೆ ಪ್ರಸಾರ ಮಾಡುತ್ತಲಿತ್ತು ಎಂದರೆ ನಿಮಗೆ ಅಚ್ಚರಿಯಾಗದೆ?

    ‘ಮಾತೃವಾಣಿ’ ಪತ್ರಿಕೆ ಮಾತ್ರವಲ್ಲ. ಅಮ್ಮನ ಭಜನೆಗಳನ್ನು ವಿವಿಧ ಲಿಪಿಗಳಲ್ಲಿ ಹಾಗೂ ಭಜನೆಗಳ ಅರ್ಥವನ್ನು ವಿವಿಧ ಭಾಷೆಗಳ ಪುಸ್ತಕಗಳಾಗಿ ಆಶ್ರಮದ ಪ್ರೆಸ್ಸು ಅಂದೇ ವಿಪುಲವಾಗಿ ಪ್ರಕಟಿಸುತ್ತಿತ್ತು. ಗುರುವಾಗಿ ಅಮ್ಮ ನೀಡುವ ಬೋಧನೆಯ ಸಂಕಲನಗಳನ್ನೂಅಂದೂ ಪ್ರಕಟಿಸುತ್ತಿತ್ತು, ಇಂದೂ ಪ್ರಕಟಿಸುತ್ತಿದೆ.

    ಕಾಲ ಬದಲಾದಂತೆ ಅಮ್ಮನ ಸಂಕಲ್ಪಕ್ಕೆ ಅನುಸಾರವಾಗಿ ಸಂದೇಶ, ಭಜನೆ, ಉಪದೇಶಗಳೆಲ್ಲವೂ ಮುದ್ರಣ ಮಾಧ್ಯಮದಲ್ಲಿ ಮಾತ್ರವಲ್ಲದೆ, ಇಂದಿನ ವಿವಿಧ ವಿದ್ಯುನ್ಮಾನ ಮಾಧ್ಯಮಗಳ ಮುಖಾಂತರವೂ ಜನತೆಯನ್ನು ತಲುಪುತ್ತಿವೆ.

    ‘ಮಾತೃವಾಣಿ’ ಪತ್ರಿಕೆ ಸಹ ಆನ್-ಲೈನ್ ಲಭ್ಯವಿದೆ. ಸದಸ್ಯತ್ವ ಪಡೆದು, ಅಮ್ಮನ ಸತ್ಸಂಗ ಸಂದೇಶಗಳ ಲಾಭಾರ್ಥಿ ನೀವಾಗಿರಿ.

     ~ ಸಂಪಾದಕ ವರ್ಗ